ಶಿವಮೊಗ್ಗ: ಕಾರು ಅಡ್ಡಗಟ್ಟಿ 3.50 ಲಕ್ಷ ರೂ. ಮೌಲ್ಯದ ತಾಮ್ರ ಮತ್ತು ಹಿತ್ತಾಳೆಯ ಗುಜರಿ ವಸ್ತುಗಳನ್ನು ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಭದ್ರಾವತಿ ಹೊಸಮನೆಯ ಭೋವಿ ಕಾಲೋನಿಯ ಕವಿರಾಜ್ (21), ಶಿವಮೊಗ್ಗದ ಮೇಲಿನ ತುಂಗಾನಗರದ ಮುಬಾರಕ್ (24), ಭದ್ರಾವತಿ ಬಾರಂದೂರಿನ ಅಜಿತ್ ಅಲಿಯಾಸ್ ಘಟ್ಟ (19), ಕಬಳಿಕಟ್ಟೆಯ ಮಂಜುನಾಥ್ ಅಲಿಯಾಸ್ ಮಂಜು (21) ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಆರ್.ಎಂ.ಎಲ್ ನಗರದ ಕಾರ್ತಿಕ್ ಓಮ್ನಿ ಕಾರಿನಲ್ಲಿ 3.50 ಲಕ್ಷ ರೂ. ಮೌಲ್ಯದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು. ಮಾ.25ರಂದು ಬೆಳಗ್ಗೆ ಭದ್ರಾವತಿಯ ರಾಮಿನಕೊಪ್ಪದಲ್ಲಿ ಓಮ್ನಿ ಕಾರನ್ನು ಅಡ್ಡಗಟ್ಟಿದ ನಾಲ್ವರು, ಗುಜರಿ ವಸ್ತುಗಳನ್ನು ದರೋಡೆ ಮಾಡಿದ್ದರು.
ಈ ಕುರಿತು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 700 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ಗುಜರಿ ವಸ್ತುಗಳು, ಕೃತ್ಯಕ್ಕೆ ಬಳಸಿದ ಟಾಟಾ ಏಸ್ ವಾಹನ, ಒಂದು ಪಲ್ಸರ್ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.