ತೆಂಕಸಿ: ತಮಿಳುನಾಡಿನ ತೆಂಕಸಿ ಬಳಿ ಪತ್ನಿಯ ಎದುರೇ ಪತಿಯ ಶಿರಚ್ಛೇದ ಮಾಡಿರುವ ಘಟನೆ ವರದಿಯಾಗಿದೆ.
ಅಪರಿಚಿತ ಗುಂಪೊಂದು ಹೆಂಡತಿಯ ಎದುರೇ ಶಿರಚ್ಛೇದ ಮಾಡಿ, ತಲೆ ತೆಗೆದುಕೊಂಡು ಪರಾರಿಯಾಗಿದ್ದರು. ಅಪರಾಧ ಸ್ಥಳದಿಂದ ಸುಮಾರು 8 ಕಿ.ಮೀ ದೂರದಲ್ಲಿ ದೇವಸ್ಥಾನದ ಬಳಿ ರುಂಡ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಮೃತ ವ್ಯಕ್ತಿಯನ್ನು ಕುಥಾಲಿಂಗಂ(35) ಎಂದು ಗುರುತಿಸಲಾಗಿದೆ.
ಅವರು ತಮ್ಮ ಪತ್ನಿಯೊಂದಿಗೆ ಕೀಳಪುಲಿಯೂರಿನಲ್ಲಿ ವಾಸಿಸುತ್ತಿದ್ದರು. ದಂಪತಿ ಎ.16ರಂದು ಸಂಜೆ ತಮ್ಮ ಹಳ್ಳಿಯಲ್ಲಿರುವ ಪಿಡಿಎಸ್ ಅಂಗಡಿಗೆ ಹೋಗಿದ್ದಾಗ ನಾಲ್ವರ ಗುಂಪೊಂದು ಅವರ ಮೇಲೆ ಹೊಂಚು ದಾಳಿ ನಡೆಸಿತ್ತು.
ಕುಥಾಲಿಂಗಂ ಅವರ ಮೇಲೆ ದಾಳಿ ನಡೆಸಿದಾಗ ಪತ್ನಿ ಅದನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಅವರು ಆಕೆಯನ್ನು ತಳ್ಳಿ ಕುತ್ತಿಗೆಯನ್ನೇ ಕಡಿದಿದ್ದಾರೆ. ಆ ಗುಂಪು ಅವರ ಶಿರಚ್ಛೇದನ ಮಾಡಿ ತಲೆಯೊಂದಿಗೆ ಪರಾರಿಯಾಗಿತ್ತು.
ಗಾಬರಿಗೊಂಡ ಮಹಿಳೆ ತಕ್ಷಣ ತೆಂಕಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಪರಿಚಿತ ದಾಳಿಕೋರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಕಾಸಿಮಜೋರ್ಪುರಂನ ದೇವಾಲಯವೊಂದರ ಬಳಿ ಕತ್ತರಿಸಿದ ತಲೆ ಪತ್ತೆಯಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿ ಮೃತದೇಹ ಮತ್ತು ತಲೆಯನ್ನು ಮರಣೋತ್ತರ ಪರೀಕ್ಷೆಗಾಗಿ ತೆಂಕಾಸಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಇದು ಸೇಡಿಗಾಗಿ ಮಾಡಿದ ಕೊಲೆಯಾಗಿರಬಹುದು, 2023ರಲ್ಲಿ ದೇವಸ್ಥಾನದ ಬಳಿ ಒಂದು ಕೊಲೆ ನಡೆದಿತ್ತು, ಈ ವ್ಯಕ್ತಿ ಆ ಕೊಲೆಯಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ನಿಖರ ಕಾರಣವನ್ನು ತಿಳಿಯಬೇಕಾದರೆ ಆರೋಪಿಗಳು ಸಿಕ್ಕಿಬೀಳಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.