ನವವಿವಾಹಿತೆಯ ಶವ ಪತ್ತೆ: ಮರ್ಯಾದಾ ಹತ್ಯೆ ಶಂಕೆ

  April 16,2025
news-banner
ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇತ್ತೀಚೆಗೆ ಕುಟುಂಬದವ ವಿರೋಧ ಕಟ್ಟಿಕೊಂಡು ತಾನು ಇಷ್ಟಪಟ್ಟವನ ಜೊತೆ ಮದುವೆಯಾದ ಮಹಿಳೆ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. 

ಅವರ ಧರ್ಮವೇ ಬೇರೆ ಬೇರೆಯಾಗಿದ್ದು, ಕುಟುಂಬದವರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆ ಮುಸ್ಲಿಂ ಆಗಿದ್ದು, ಗಂಡ ಹಿಂದೂ ಆಗಿದ್ದ. ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಇದು ಮರ್ಯಾದಾ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾಸ್ಮಿನ್ ಬಾನು, ವಿದ್ಯಾರ್ಥಿನಿಯರಾಗಿದ್ದಾಗ ಪ್ರಾರಂಭವಾದ ನಾಲ್ಕು ವರ್ಷಗಳ ಸಂಬಂಧದ ನಂತರ ಈ ವರ್ಷದ ಫೆಬ್ರವರಿಯಲ್ಲಿ ಸಾಯಿ ತೇಜ ಅವರನ್ನು ವಿವಾಹವಾಗಿದ್ದರು. 

ಯಾಸ್ಮಿನ್ ಕುಟುಂಬವು ಅವರ ಮದುವೆಗೆ ವಿರುದ್ಧವಾಗಿತ್ತು. ಮದುವೆಯಾದ ಕೂಡಲೇ ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಪೊಲೀಸ್ ರಕ್ಷಣೆ ಕೋರಿದ್ದರು. ಪೊಲೀಸರು ಯಾಸ್ಮಿನ್ ಪೋಷಕರಿಗೆ ಕೆಲವು ಸಲಹೆ ನೀಡಿದ್ದರು ಮತ್ತು ಇಬ್ಬರೂ ವಯಸ್ಕರು ಎಂದು ಖಚಿತಪಡಿಸಿಕೊಂಡ ನಂತರ, ಪೊಲೀಸರು ಯಾಸ್ಮಿನ್ ತೇಜಳೊಂದಿಗೆ ಹೋಗಲು ಅವಕಾಶ ನೀಡಿದರು.

ಮದುವೆಯಾದಾಗಿನಿಂದ ಯಾಸ್ಮಿನ್‌ಳ ಅಣ್ಣ ಮತ್ತು ತಂಗಿ ಪದೇ ಪದೇ ಕರೆ ಮಾಡುತ್ತಿದ್ದರು. ಆಕೆಯ ಸಾವಿಗೆ ಮೂರು ದಿನಗಳ ಮೊದಲು, ಆಕೆಯ ಕುಟುಂಬದವರು ಆಕೆಯನ್ನು ಸಂಪರ್ಕಿಸಿ, ಆಕೆಯ ತಂದೆಯ ಆರೋಗ್ಯ ಹದಗೆಟ್ಟಿದೆ ಮತ್ತು ಬಂದು ಭೇಟಿಯಾಗು ಎಂದು ಒತ್ತಾಯಿಸಿದ್ದರು ಎಂದು ತೇಜ ತಿಳಿಸಿದ್ದಾನೆ.

ಸಾಯಿ ತೇಜ ಆಕೆಗೆ ಹೋಗಲು ಅನುಮತಿ ನೀಡಿದ್ದರು. ಆದರೆ, ಸುಮಾರು ಅರ್ಧ ಗಂಟೆಯ ನಂತರ ಯಾಸ್ಮಿನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಆಕೆಯ ಕುಟುಂಬ ಸದಸ್ಯರು ಆಕೆ ಆಸ್ಪತ್ರೆಯಲ್ಲಿದ್ದಾರೆಂದು ಮೊದಲು ತಿಳಿಸಿದ್ದರು. ನಂತರ ಆಕೆಯ ಸಾವಿನ ಸುದ್ದಿಯನ್ನು ಅವರಿಗೆ ತಿಳಿಸಿದ್ದರು.

ಯಾಸ್ಮಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಆಕೆಯ ಕುಟುಂಬ ಹೇಳಿಕೊಂಡಿದ್ದಾರೆ. ತೇಜ ಇದು ದುಷ್ಕೃತ್ಯ ಎಂದು ಆರೋಪಿಸಿದ್ದಾರೆ. 

ಯಾಸ್ಮಿನ್ ಕುಟುಂಬ ಸದಸ್ಯರು ಆಕೆಯನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆಯಂತೆ ಬಿಂಬಿಸಿದ್ದಾರೆ ಎಂದು ಸಾಯಿ ತೇಜ ಆರೋಪಿಸಿದ್ದಾರೆ.

ಯಾಸ್ಮಿನ್‌ಳನ್ನು ಆಕೆಯ ಗಂಡನ ಮನೆಯಿಂದ ಕರೆದುಕೊಂಡು ಹೋದ ಸಂಬಂಧಿಕರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. 

ಯಾಸ್ಮಿನ್‌ಳ ತಾಯಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮರ್ಯಾದಾ ಹತ್ಯೆಯ ಕೋನವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣವನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

Leave Your Comments