ಪೊಲೀಸರಿಗೆ ದೂರು ನೀಡಿದ ದ್ವೇಷದಿಂದ ಬೆಂಕಿ ಹಚ್ಚಿದ ದುಷ್ಕರ್ಮಿ: ಯುವತಿ ಸಾವು

  April 15,2025
news-banner
ಕಾಸರಗೋಡು: ಬೇಡಡ್ಕದಲ್ಲಿ ಪೊಲೀಸರಿಗೆ ದೂರು ನೀಡಿದ ದ್ವೇಷದಿಂದ ದುಷ್ಕರ್ಮಿಯೋರ್ವ ಯುವತಿಗೆ ಬೆಂಕಿ ಹಚ್ಚಿದ್ದರಿಂದ ಗಂಭೀರ ಸುಟ್ಟ ಗಾಯಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಯುವತಿ ಬೇಡಡ್ಕದ ರಮಿತಾ (22) ಎಂದು ತಿಳಿದು ಬಂದಿದೆ. ಬೇಡಡ್ಕ ಮನ್ನಡ್ಕ ಎಂಬಲ್ಲಿ ಅವರು ಅಂಗಡಿ ನಡೆಸುತ್ತಿದ್ದರು.

ಕೃತ್ಯ ಎಸಗಿದ ಆರೋಪಿ ಸಮೀಪದ ಪೀಠೋಪಕರಣ ಮಳಿಗೆ ಮಾಲಕ ತಮಿಳುನಾಡು ಮೂಲದ ರಾಮಕೃಷ್ಣ (57) ಎಂದು ತಿಳಿದು ಬಂದಿದೆ.

ಪಾನಮತ್ತನಾಗಿ ಕಿರುಕುಳ ನೀಡಿದ ಬಗ್ಗೆ ರಮಿತಾ ಪೊಲೀಸರಿಗೆ ದೂರು ನೀಡಿದ್ದು, ಇದರಿಂದ ಈತ ಆಕೆಯ ದಿನಸಿ ಅಂಗಡಿಯೊಳಗೆ ನುಗ್ಗಿ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದ. ಘಟನೆಯಲ್ಲಿ ಯುವತಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ರಮಿತಾ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದಿನಂಪ್ರತಿ ರಾಮಕೃತ ಪಾನಮತ್ತನಾಗಿ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ರಮಿತಾ ಬೇಡಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಿದ ವೈಷಮ್ಯದಿಂದ ಎ.8 ರ ಸಂಜೆ 3 ಗಂಟೆಗೆ ರಮಿತಾ ಅಂಗಡಿಯೊಳಗೆ ನುಗ್ಗಿದ ಈತ ಆಕೆಯ ದೇಹಕ್ಕೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದನು. ಆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು ಎಂದು ತಿಳಿದು ಬಂದಿದೆ.

Leave Your Comments