ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಯ
ಅಪಹರಣ, ಅತ್ಯಾಚಾರ ಮತ್ತು ಪೊಕ್ಸೊ ಪ್ರಕರಣದಲ್ಲಿ ಆರೋಪಿಯಾಗಿದ್ದ ಆಟೋರಿಕ್ಷಾ ಚಾಲಕನನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಎಫ್ಟಿಎಸ್ಸಿ-2 ದೋಷಮುಕ್ತಗೊಳಿಸಿದೆ.
ಖುಲಾಸೆಗೊಂಡ ಆಟೋ ಚಾಲಕ ಚೇತನ ಕುಮಾರ್ ಎಂದು ತಿಳಿದು ಬಂದಿದೆ.
2023ರ ಫೆ.20ರಂದು ರಾತ್ರಿ ಬಂಟ್ವಾಳ ತಾಲೂಕಿನ ಗ್ರಾಮವೊಂದರ ಮನೆಯಲ್ಲಿ ಮಲಗಿದ್ದ ಯುವತಿ ರಾತ್ರಿ ನಾಪತ್ತೆಯಾಗಿದ್ದ ಬಗ್ಗೆ 21ರಂದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾ.4ರಂದು ಆರೋಪಿ ಮತ್ತು ವಿದ್ಯಾರ್ಥಿನಿಯನ್ನು ಮಂಡ್ಯ ಜಿಲ್ಲೆಯ ಬಾಡಿಗೆ ಮನೆಯಿಂದ ವಶಕ್ಕೆ ಪಡೆಯಲಾಗಿತ್ತು ಎಂದು ತಿಳಿದು ಬಂದಿದೆ.
ಬಾಲಕಿಯನ್ನು ಚೇತನ್ ಮದುವೆಯಾಗುವ ಉದ್ದೇಶದಿಂದ ಪುಸಲಾಯಿಸಿ ಫೆ.21ರಂದು ರಾತ್ರಿ ಅವಳ ಮನೆಯಿಂದ ಅಪಹರಿಸಿದ್ದ.
ಬಾಲಕಿ ಅಪ್ರಾಪ್ತ ವಯಸ್ಕಳು ಎಂದು ತಿಳಿದಿದ್ದರೂ, ದೈಹಿಕ ಸಂಪರ್ಕ ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ಆರೋಪಿಸಲಾಗಿತ್ತು. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಾನು ಕೆ.ಎಸ್. ಅವರು ಆರೋಪಿ ವಿರುದ್ಧ ಸಮರ್ಪಕ ವೈದ್ಯಕೀಯ ಹಾಗೂ ಸಾಂದರ್ಭಿಕ ಸಾಕ್ಷ್ಯಗಳಿಲ್ಲ ಮತ್ತು ನೊಂದ ಬಾಲಕಿಯ ಪರವಾಗಿ ಸಾಕ್ಷ್ಯಗಳ ಕೊರತೆ ಕಾರಣದಿಂದ ಪ್ರಕರಣದಿಂದ ಆರೋಪಿಯನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ ಎಂದು ತಿಳಿದು ಬಂದಿದೆ.