ಮಂಗಳೂರು: ಎಪಿಕೆ ಫೈಲ್ ಕಳುಹಿಸಿ ವ್ಯಕ್ತಿಗೆ 1.31 ಲಕ್ಷ ರೂ. ವಂಚನೆ; ಆರೋಪಿಯ ಬಂಧನ

  December 7,2024
news-banner
ಮಂಗಳೂರು: ಎಪಿಕೆ ಫೈಲ್ ಕಳುಹಿಸಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 1.31 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಸಿಇಎನ್​ ಕ್ರೈಂ ಠಾಣೆಯ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿ ದೆಹಲಿಯ ಮಾಳ್ವವಿಯಾ ನಗರದ ಪಂಚಶೀಲ ವಿಹಾರದ ಗೌರವ್ ಮಕ್ವಾನ್ (25) ಎಂದು ತಿಳಿದು ಬಂದಿದೆ.

ಆರೋಪಿಯು ಯದುನಂದನ್ ಎಂಬವರ ವಾಟ್ಸಾಪ್ ​ಗೆ  ಫೈಲ್ ಕಳುಹಿಸಿದ್ದ. ಆದರೆ, ಫೈಲ್ ಡೌನ್​ಲೋಡ್ ಮಾಡುತ್ತಿದ್ದಂತೆ ಯದುನಂದನ್‌ ಅವರ ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿತ್ತು. ಬಳಿಕ, ಸೈಬರ್ ವಂಚಕರು ಪ್ಲಿಪ್ ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​​ಗಳಿಂದ 1.31ಲಕ್ಷ ರೂ. ಮೌಲ್ಯದ ಎರಡು ಮೊಬೈಲ್ ಫೋನ್, 1 ಏರ್​ಪಾಡ್ ಹಾಗೂ ಗಿಫ್ಟ್ ವೋಚರ್​ಗಳನ್ನು ಖರೀದಿ ಮಾಡಿದ್ದರು. 

ಈ ಕುರಿತು ವಂಚನೆಗೊಳಗಾದವರು ಪೊಲೀಸರಿಗೆ ದೂರು ನೀಡಿದ್ದರು ಎಂದು ತಿಳಿದು ಬಂದಿದೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಪ್ಲಿಪ್ ಕಾರ್ಟ್ ಕಂಪನಿಯಿಂದ ಮಾಹಿತಿ ಸಂಗ್ರಹಿಸಿ, ಪ್ರಕರಣ ದಾಖಲಾದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ. 

ಸಿಇಎನ್​​ ಕ್ರೈಂ ಪೊಲೀಸ್ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಹಾಗೂ ಪಿಸಿ ತಿಪ್ಪಾರೆಡ್ಡಿ ದೆಹಲಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿ ಆರೋಪಿಯನ್ನು ಬಂಧಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯಿಂದ ಎರಡು ಅಂಡ್ರಾಯ್ಡ್ ಫೋನ್ ಸೇರಿದಂತೆ ಐದು ಐಪೋನ್-15, ಎರಡು ಏರ್​​ಪ್ಯಾಡ್ ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ ಸೇರಿದಂತೆ ಒಟ್ಟು 4 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಗೆ ನ್ಯಾಯಾಲಯವು​ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave Your Comments