ಸೇತುವೆಯಿಂದ ಬಿದ್ದ ಬೈಕ್: ಸವಾರ ಮೃತ್ಯು, ಸಹಸವಾರ ಗಂಭೀರ

  July 22,2024
news-banner
ಬೆಂಗಳೂರು: ಬೈಕ್‌ ನಿಯಂತ್ರಣ ತಪ್ಪಿ ಬಿದ್ದು ಸವಾರ ಮೃತಪಟ್ಟಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ರಸ್ತೆಯ ಬಿಜಿಎಸ್‌ ಮೇಲು ಸೇತುವೆಯ ಡೌನ್‌ ರ್‍ಯಾಂಪ್‌ನಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ಮೃತ ಸವಾರ ವಾಲ್ಮೀಕಿನಗರದ ವಿಘ್ನೇಶ್ (26) ಎಂದು ತಿಳಿದು ಬಂದಿದೆ. 

ಸಹ ಸವಾರ ಕೆಂಗೇರಿಯ ಶ್ರೀನಿಧಿ ಗಾಯಗೊಂಡಿರುವ ಎಂದು ತಿಳಿದು ಬಂದಿದೆ.

ಸದ್ಯ ಶ್ರೀನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಭಾನುವಾರ ಮುಂಜಾನೆ ಸುಮಾರು 1.30ಕ್ಕೆ ಬಿಜಿಎಸ್‌ ಮೇಲು ಸೇತುವೆಯಲ್ಲಿ ಡೌನ್‌ ರ್‍ಯಾಂಪ್‌ನಲ್ಲಿ ಸಿಟಿ ಮಾರ್ಕೆಟ್‌ ಕಡೆಯಿಂದ ಕೆಂಗೇರಿ ಕಡೆಗೆ ಹೋಗುವಾಗ ಈ ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು. 

ಮೃತ ಸವಾರ ವಿಘ್ನೇಶ್ ಹಾಗೂ ಈತನ ಸ್ನೇಹಿತ ಶ್ರೀನಿಧಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ತಡರಾತ್ರಿ ಇಬ್ಬರು ಸಿಟಿ ಮಾರ್ಕೆಟ್‌ನಲ್ಲಿ ಊಟ ಮಾಡಿದ್ದಾರೆ. ಮುಂಜಾನೆ ದ್ವಿಚಕ್ರ ವಾಹನದಲ್ಲಿ ಬಿಜಿಎಸ್‌ ಮೇಲು ಸೇತುವೆಯಲ್ಲಿ ಸಿಟಿ ಮಾರ್ಕೆಟ್‌ ಕಡೆಯಿಂದ ಕೆಂಗೇರಿ ಕಡೆಗೆ ಹೊರಟಾಗ ಮಾರ್ಗ ಮಧ್ಯೆ ಮೇಲು ಸೇತುವೆಯ ಡೌನ್‌ ರ್‍ಯಾಂಪ್‌ನಿಂದ ರಸ್ತೆಗೆ ಇಳಿಯುವಾಗ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ಇಬ್ಬರು ರಸ್ತೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭ ಗಂಭೀರವಾಗಿ ಗಾಯಗೊಂಡಿದ್ದ ಸವಾರರಿಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದ ಸವಾರ ವಿಘ್ನೇಶ್ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾನೆ. ಸಹ ಸವಾರ ಶ್ರೀನಿಧಿ ಕೈ ಹಾಗೂ ಕಾಲುಗಳಿಗೆ ಗಂಭೀರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು‌ ತಿಳಿದು ಬಂದಿದೆ.

ಈ ಕುರಿತು ಚಿಕ್ಕಪೇಟೆ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave Your Comments