ಮಂಗಳೂರು: ಸ್ವಸಹಾಯ ಸಂಘಗಳಿಗೆ ಟ್ರಸ್ಟ್ ಗಳ ಮೂಲಕ ನಡೆಯುವ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು. ಸಾಲ ಪಡೆದವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸಿ ಬಡವರಿಗೆ ಸ್ವಸಹಾಯ ಸಂಘಗಳ ಮೂಲಕ ನೀಡಲಾಗಿರುವ ಸಾಲ ಮನ್ನಾ ಮಾಡಬೇಕೆಂದು ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಜ್ ಸರಕಾರವನ್ನು ಆಗ್ರಹಿಸಿದ್ದಾರೆ.
ಅವರು ನಗರದ ನಾಸಿಕ್ ಬಂಗೇರಾ ಭವನದಲ್ಲಿ ಸ್ವಸಹಾಯ ಗುಂಪುಗಳ ಮತ್ತು ಮೈಕ್ರೋ ಸಾಲ ಸಂತ್ರಸ್ತರ ಮಂಗಳೂರು ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.
ಬಡವರ ಆದಾಯ ಮೂಲಗಳನ್ನು ಪರಿಶೀಲಿಸದೆ, ಸಾಲ ಮರುಪಾವತಿಯ ಮೂಲಗಳನ್ನು ಪರಿಶೋಧಿಸದೆ ಲಕ್ಷಾಂತರ ರೂ. ಸಾಲ ನೀಡಿರುವುದು ನಿಯಮ ಬಾಹಿರ ಕೆಲಸವನ್ನು ಸ್ವಸಹಾಯ ಸಂಘಗಳನ್ನು ನಿರ್ವಹಣೆ ಮಾಡುವ ಟ್ರಸ್ಟ್ ಗಳು ಮಾಡುತ್ತಿವೆ ಎಂದು ಆರೋಪಿಸಿದ ಅವರು, ಸಾಲ ವಸೂಲಿಯ ಹೆಸರಲ್ಲಿ ಬಡವರಿಗೆ ಕಿರುಕುಳ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷರಾದ ಬಿ.ಎಂ. ಭಟ್, ನಬಾರ್ಡ್ ನಿಂದ ಶೇ.3 ಬಡ್ಡಿಗೆ ತಂದ ಹಣವನ್ನು ಫ್ಲಾಟ್ ಬಡ್ದಿಗೆ ಬಡವರಿಗೆ ನೀಡಿ ಬಡವರ ರಕ್ತ ಹೀರಲಾಗುತ್ತಿದೆ. ದೇವರು, ಕ್ಷೇತ್ರದ ಹೆಸರನ್ನು ಬಳಸಿಕೊಂಡು ಮುಗ್ಧ ಜನರನ್ನು ಭಾವನಾತ್ಮಕವಾಗಿ ಹೆದರಿಸಿ ಸಾಲ ಪಡೆದ ಬಡವರನ್ನು ಶೋಷಣೆ ಮಾಡಲಾಗುತ್ತಿದೆ. ಬಡವರಿಗೆ ಸಾಲ ವಸೂಲಾತಿಯ ಹೆಸರಲ್ಲಿ ದೌರ್ಜನ್ಯ ಎಸಗಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಋಣಮುಕ್ತ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಯೋಗಿತಾ ಸುವರ್ಣ ಪ್ರಾಸ್ತಾವಿಕ ಮಾತನಾಡಿದರು.
ರೇಷ್ಮಾ ಬೆಂಗ್ರೆ ಸ್ವಾಗತಿಸಿ, ನಾಸಿರ್ ಬಾಸ್ ವಂದಿಸಿದರು