ಸ್ನೇಹಿತರ ಜೊತೆಗೂಡಿ ದೊಡ್ಡಪ್ಪನ ಮನೆಯಲ್ಲಿ ಕಳವು: ಆರೋಪಿಗಳ ಬಂಧನ

  June 10,2024
news-banner
ಹುಣಸೂರು: ದೊಡ್ಡಪ್ಪನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸ್ನೇಹಿತರೊಡಗೂಡಿ 3 ಲಕ್ಷ ನಗದು, 35 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಗಳನ್ನು ಬಿಳಿಕೆರೆ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳು ತಾಲೂಕಿನ ಉದ್ದೂರು ಗ್ರಾಮದ ಶಿವಣ್ಣೇಗೌಡರ ಪುತ್ರ ಮಂಜುನಾಥ, ಈತನ ಸ್ನೇಹಿತರಾದ ಸೂರ್ಯ ಅಲಿಯಾಸ್ ಸೂರಿ ಎಂದು ತಿಳಿದು ಬಂದಿದೆ. 

ಗ್ರಾಮದ ಅಜಯ್ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ತಾಲೂಕಿನ ಧರ್ಮಾಪುರ ಗ್ರಾಮದ ರಾಮೇಗೌಡರ ಮನೆಯಲ್ಲಿ ಜೂ.7ರಂದು ಹಾಡು ಹಗಲೇ ನಡೆದಿದ್ದು, ನಗದು ಮತ್ತು ಚಿನ್ನಾಭರಣ ಕಳ್ಳತನವಾಗಿತ್ತು. 

ಶಿವಣ್ಣೇಗೌಡರ ಪುತ್ರ ಮಂಜುನಾಥ್ ಧರ್ಮಪುರದ ಅಜ್ಜಿ ಮನೆಗೆ ಬಂದಿದ್ದ. ದೊಡ್ಡಪ್ಪ ರಾಮೇಗೌಡರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಮಂಜುನಾಥ ಸ್ನೇಹಿತರಾದ ಸೂರಿ, ಅಜಯ್‌ನನ್ನು ಕರೆಸಿಕೊಂಡು ಅಜ್ಜಿಯ ಮನೆಗೆ ಹೊಂದಿಕೊಂಡಿದ್ದ ಗೋಡೆ ಹತ್ತಿ, ದೊಡ್ಡಪ್ಪನ ಮನೆಯ ಬೀರುವಿನಲ್ಲಿಟ್ಟಿದ್ದ ೩ಲಕ್ಷ ನಗದು ಹಾಗೂ ಸುಮಾರು 35 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಎಂದು ತಿಳಿದು ಬಂದಿದೆ.

ಈ ಕುರಿತು ಬಿಳಿಕೆರೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಳಿಕೆರೆ ಪೊಲೀಸರು ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಜುನಾಥ ಉದ್ದೂರಿನ ಮನೆಯಲ್ಲಿರುವುದನ್ನು ಖಚಿತಪಡಿಸಿಕೊಂಡು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಸ್ನೇಹಿತರಾದ ಸೂರಿ ಮತ್ತು ಅಜಯ್ ಜೊತೆಗೂಡಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕೃತ್ಯಕ್ಕೆ ಬಳಸಿದ್ದ ಮಹಿಂದ್ರಾ ಜೀಪ್, 1.27ಲಕ್ಷ ನಗದು, 1.40 ಲಕ್ಷ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 

ಅಜಯ್ ತಲೆ ಮರೆಸಿಕೊಂಡಿದ್ದು ಪತ್ತೆಗೆ ಕ್ರಮವಹಿಸಲಾಗಿದೆ. ಎಂದು ಬಿಳಿಕೆರೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.

Leave Your Comments